ತಲೆಯ ಮೇಲೆ ಮಲ ಸುರಿದುಕೊಂಡರು


ಸವಣೂರ: ಹಾವೇರಿ ತಾಲೂಕು ಸವಣೂರಿನಲ್ಲಿ ತಲೆಯ ಮೇಲೆ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ರಾಜ್ಯದಾದ್ಯಂತ ಈ ಪದ್ಧತಿ ನಿಷೇಧಕ್ಕೊಳಗಾಗಿದ್ದರೂ ಅದನ್ನೇ ನಂಬಿ ಬದುಕಿರುವ ಭಂಗಿ ಸಮುದಾಯದ ಜನರ ಬದುಕು ಮಾತ್ರ ಇನ್ನೂ ದುರ್ವಾಸನೆಯಿಂದಲೇ ಕೂಡಿದೆ. ಅಸಹ್ಯ ತೊಡೆದುಹಾಕಿ ಸಹ್ಯ ಬದುಕು ಒದಗಿಸಬೇಕಾದ ಪುರಸಭೆಯೇ ಇವರ ಬದುಕಿನ ಜೊತೆ ಆಟವಾಡಿದಾಗ ಈ ಜನ ಸಿಡಿದೆದ್ದದ್ದು ತಲೆಯ ಮೇಲೆ ಮಲ ಸುರಿದುಕೊಂಡೇ.

ಸವಣೂರಿನ ಪುರಸಭೆಯ ಆವರಣದಲ್ಲಿ ಮಂಗಳವಾರ ಮಲವನ್ನು ತಲೆಯ ಮೇಲೆ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ ಕುಟುಂಬದ ಸದಸ್ಯರು.

ಇಲ್ಲಿಯ ಭಂಗಿ ಸಮುದಾಯದವರು ಮಂಗಳವಾರ ಮಲವನ್ನೇ ತಲೆಯ ಮೇಲೆ ಸುರಿದುಕೊಂಡು ವಿಲಕ್ಷಣ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪುರಸಭೆಯ ಆವರಣದಲ್ಲಿ ನಡೆದ ಈ ಪಿಚ್ಚೆನಿಸುವ ಪ್ರತಿಭಟನೆ ನಗರದ ಎಲ್ಲರ ಮನ ಕಲಕಿತು. ಸವಣೂರಿನಲ್ಲಿ ಇನ್ನೂ ನೂರಕ್ಕೆ 90 ರಷ್ಟು ಮನೆಗಳಲ್ಲಿ ಸೂಕ್ತವಾದ ಶೌಚಾಲಯಗಳಿಲ್ಲ. ಡಬ್ಬಿ ಪಾಯಖಾನೆಗಳೇ ಇವೆ. ಪ್ರತಿದಿನ ಇದನ್ನು ತಲೆಯ ವೆುೀಲೆ ಹೊತ್ತು ಸ್ವಚ್ಛ ಮಾಡುವ  ಭಂಗಿ ಜನರು ಕುಡಿಯಲು ನೀರು, ನೆರಳಿಗೊಂದು ಸೂರು, ನೆಮ್ಮದಿಯ ಆರೋಗ್ಯಪೂರ್ಣ ಬದುಕು ಹಾಗೂ ಬದುಕಿನ ಭದ್ರತೆಗಾಗಿ ಮೊರೆ ಇಟ್ಟು ಹೋರಾಟಕ್ಕಿಳಿದಿದ್ದಾರೆ.

ಹಿನ್ನೆಲೆ: ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು 70 ವರ್ಷಗಳಿಂದ ವಾಸವಾಗಿರುವ ಭಂಗಿ ಸಮುದಾಯದ 4 ಕುಟುಂಬಗಳು ಮಲ ಹೊರುವ ಪದ್ಧತಿಯಿಂದಲೇ ಜೀವನ ನಡೆಸುತ್ತಿವೆ. ಪುರಸಭೆಯು ಅವರ ಗುಡಿಸಲಗಳನ್ನು (ತಗಡಿನ ಶೆಡ್) ತೆರವುಗೊಳಿಸಿ, ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಕ್ಕೆ ಈ ಪ್ರತಿಭಟನೆ ನಡೆದಿದೆ.

ಭಂಗಿಗಳ ಮನೆಗೆ ಇದ್ದ ನಳದ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಹೊಸ ನಳದ ಸಂಪರ್ಕ ನೀಡಲೂ ನಿರಾಕರಿಸಲಾಗಿದೆ. ಮನೆ ಆವರಣದಲ್ಲಿ ಹೊಲಸು ಸುರಿಯಲಾಗಿದೆ. ಮನೆಗಳಿಗೆ ನುಗ್ಗಿ ಮಹಿಳೆಯರನ್ನು ನಿಂದಿಸಿ ಬೆದರಿಕೆ ಹಾಕಲಾಗಿದೆ. ಸಾರ್ವಜನಿಕ ನಳಗಳಲ್ಲಿಯೂ ನೀರು ಸಿಗದೆ, ಅಂತಿಮವಾಗಿ ತೆಗ್ಗಿನಲ್ಲಿ ನಿಲ್ಲುವ ಕೊಳಚೆ ನೀರು ಕುಡಿಯಬೇಕಾಗಿದೆ ಎಂಬ ನೋವನ್ನು ಭಂಗಿ ಕುಟುಂಬಗಳು ವ್ಯಕ್ತಪಡಿಸಿವೆ.

ತಮ್ಮ ಬದುಕಿಗೆ ರಕ್ಷಣೆ ನೀಡುವಂತೆ ಸರಕಾರಕ್ಕೆ ಹಲವಾರು ಸಲ ಇವರು ಕೋರಿದ್ದಾರೆ. ಜನವರಿ ತಿಂಗಳಿನಲ್ಲಿಯೇ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ 7 ತಿಂಗಳುಗಳನ್ನು ಅಭದ್ರತೆಯ ನೆರಳಿನಲ್ಲಿಯೇ ಕಳೆದಿದ್ದಾರೆ. ಬೇಡಿಕೆ ಈಡೇರದಿದ್ದಾಗ ಇಂಥ ಪ್ರತಿಭಟನೆಗೆ ಮುಂದಾದರು.

ತಮ್ಮ ಮನೆಗಳಿಗೆ ತಾತ್ಕಾಲಿಕವಾಗಿ ನಳ ಸಂಪರ್ಕ ಕಲ್ಪಿಸುವಂತೆ ಸೋಮವಾರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಭಂಗಿ ಸಮುದಾಯ, ಮಂಗಳವಾರ ಪ್ರತಿಭಟನೆ ಮಾಡುವ ಮುನ್ಸೂಚನೆ ನೀಡಿತ್ತು. ಪ್ರತಿ ನಳಕ್ಕೂ ಎರಡು ಸಾವಿರ ರೂ.ಗಳನ್ನು ಪುರಸಭೆಗೆ ತುಂಬಿದ ಬಳಿಕವೇ ನಳದ ಸಂಪರ್ಕ ನೀಡಲಾಗುತ್ತದೆ ಎಂಬ ಸೂಚನೆಯಿಂದ ನಿಸ್ಸಹಾಯಕರಾದ ಭಂಗಿ ಸಮುದಾಯದವರು ಮಂಗಳವಾರ ಪ್ರತಿಭಟನೆಗೆ ಮುಂದಾದರು.

ಸವಣೂರಿನ ಕಮಾಲ ಬಂಗಡಿ ಓಣಿಯಲ್ಲಿರುವ ತಮ್ಮ ಮನೆಯಿಂದ ಹಲಿಗೆ ಬಾರಿಸುವುದರೊಂದಿಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಭಂಗಿ ಸಮುದಾಯ, ತಮ್ಮೊಂದಿಗೆ ಸವಣೂರ ಪುರಸಭೆಯ ಅಣಕು ಶವದ ಅಂತಿಮ ಯಾತ್ರೆಯನ್ನೂ ಮಾಡಿದರು.

ನಿವೇಶನ-ಭರವಸೆ: ಈ ಹಂದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಡಿ.ಎಸ್.ಎಸ್. ಕಾರ್ಯಕರ್ತರಲ್ಲಿ ತೀವ್ರ ವಾಗ್ವಾದ ನಡೆಯಿತು. ಭಂಗಿಗಳನ್ನು ತೆರವುಗೊಳಿಸಲು ಪುರಸಭೆ ಮುಂದಾಗಿಲ್ಲ ಎಂದು ತಿಳಿಸಿದ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ್, ಅವರಿಗೆ ವಸತಿ ಯೋಜನೆಗಳಲ್ಲಿ ನಿವೇಶನ ನೀಡುವದಾಗಿ ತಿಳಿಸಿದರು. ಅಕ್ರಮ ನಳದ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪುರಸಭೆ ಆವರಣದಲ್ಲಿಯೇ ಸವಣೂರಿನ ಉಪವಿಭಾಗಾಧಿಕಾರಿ ಅಥವಾ ತಹಶೀಲ್ದಾರರಿಗೆ ಮನವಿ ಸಲ್ಲಿಸಬೇಕು ಎಂಬ ಉದ್ದೇಶವನ್ನು ಪ್ರತಿಭಟನಾಕಾರರು ಹೊಂದಿದ್ದರೂ, ಸ್ಥಳದಲ್ಲಿ ಮನವಿ ಸ್ವೀಕರಿಸಲು ಯಾರೂ ಮುಂದಾಗಲಿಲ್ಲ.

ಅಂತಿಮವಾಗಿ ಪುರಸಭೆಯ ಆವರಣದಲ್ಲಿ ಸ್ನಾನ ಮಾಡಿದ ಪ್ರತಿಭಟನಾಕಾರರು, ಮಲ ತೆಗೆದು ಆವರಣ ಸ್ವಚ್ಛಗೊಳಿಸಿದರು. ಬಳಿಕ ಎಲ್ಲ ಭಂಗಿ ಕುಟುಂಬಗಳು ಹಾಗೂ ಡಿಎಸ್‌ಎಸ್ ಕಾರ್ಯಕರ್ತರು ಕಂದಾಯ ಇಲಾಖೆಗೆ ತೆರಳಿ ತಹಶೀಲ್ದಾರ ಡಾ.ಪ್ರಶಾಂತ ನಾಲವಾರ ಅವರಿಗೆ ಮನವಿ ಸಲ್ಲಿಸಿದರು.

Leave a comment